ಬಸ್ರೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಪ್ರಕಟಿಸಿದ 2025–26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಬಸ್ರೂರಿನ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಮತ್ತೊಮ್ಮೆ ಮಿಂಚಿ, ಶೈಕ್ಷಣಿಕ ಶ್ರೇಷ್ಠತೆಯ ಧ್ವಜವನ್ನು ಎತ್ತಿಹಿಡಿದಿದ್ದಾರೆ.
ಶಾಲೆಯಿಂದ ಪರೀಕ್ಷೆಗೆ ಹಾಜರಾದ 21 ವಿದ್ಯಾರ್ಥಿಗಳಲ್ಲಿ, 7 ಮಂದಿ ವಿಶಿಷ್ಟ ಶ್ರೇಣಿ, 11 ಮಂದಿ ಪ್ರಥಮ ಶ್ರೇಣಿ ಹಾಗೂ 3 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಸತತವಾಗಿ 3 ಬಾರಿ 100% ಫಲಿತಾಂಶ ದಾಖಲಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ.

ಈ ಬಾರಿ ಪರೀಕ್ಷೆಯಲ್ಲಿ 597 ಅಂಕಗಳನ್ನು ಪಡೆದ ರಿತೇಶ್ ಎಸ್. ರಾವ್ ಶಾಲೆಯ ಟಾಪರ್ ಆಗಿ ಹೊರಹೊಮ್ಮಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರನ್ನು ಶಾಲಾ ವತಿಯಿಂದ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ಹೊಸ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಿದ ಬಳಿಕ, ಶಿಕ್ಷಣ ಇಲಾಖೆಯಿಂದ ಸತತವಾಗಿ ಮೂರು ಬಾರಿ ‘ಅತ್ಯುತ್ತಮ ಶ್ರೇಣಿ (ಎ ಗ್ರೇಡ್)’ ಮಾನ್ಯತೆ ಪಡೆಯುವ ಮೂಲಕ ಸಂಸ್ಥೆ ತನ್ನ ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಂದು ಚಿನ್ನದ ಮೆರುಗು ಸೇರಿಸಿಕೊಂಡಿದೆ.
ಅತಿ ಸಾಮಾನ್ಯ ವಿದ್ಯಾರ್ಥಿಗಳನ್ನು ಅತ್ಯುನ್ನತ ಶ್ರೇಣಿಗೆ ತರುವಲ್ಲಿ ಶ್ರಮಿಸಿದ ಶಿಕ್ಷಕರು ಹಾಗೂ ಪೋಷಕರ ಸಹಕಾರ ಶ್ಲಾಘನೀಯವಾಗಿದೆ. ಈ ಸಾಧನೆ ಸಂಸ್ಥೆಯ ಶೈಕ್ಷಣಿಕ ಕೀರ್ತಿಗೆ ಹೊಸ ಎತ್ತರ ತಂದುಕೊಟ್ಟಿದೆ.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರು, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕರು ಸಂತೋಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.

