ಪುತ್ತೂರು : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅವಾಚ್ಯ ಪದ ಬಳಕೆ, ಮಾನಹಾನಿ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ನಿವಾಸಿ ಸುಂದರ ರೈ ಮಂದಾರರವರು (55) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಉಜಿರೆ ತಿಮರೋಡಿ ನಿವಾಸಿ ಮಹೇಶ್ ಶೆಟ್ಟಿ ವಿರುದ್ಧ BNS 2023ರ 196(1), 352, 351(4), 79 ಕಲಂಗಳಡಿ ಪ್ರಕರಣ ದಾಖಲಾಗಿದೆ.
ದೂರು ಪ್ರಕಾರ, ಪಿರ್ಯಾದುದಾರರ ಸ್ನೇಹಿತನಿಂದ ವಾಟ್ಸಪ್ ಮೂಲಕ ಬಂದ ಧ್ವನಿಮುದ್ರಿಕೆಯಲ್ಲಿ ಆರೋಪಿತರು ಪ್ರಜ್ವಲ್ ಕುಮಾರ್ ಅವರೊಂದಿಗೆ ಫೋನ್ ಸಂಭಾಷಣೆ ನಡೆಸುವ ವೇಳೆ ಅವಾಚ್ಯ ಶಬ್ದಗಳನ್ನು ಬಳಸಿಕೊಂಡು ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಕುಟುಂಬದ ಸದಸ್ಯರು, ವಿಶೇಷವಾಗಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವುದಲ್ಲದೆ, ಜಾತಿ ವೈಷಮ್ಯಕ್ಕೆ ಕಾರಣವಾಗುವ ರೀತಿಯಲ್ಲಿ ಮಾತನಾಡಿರುವ ಆರೋಪವೂ ಇದೆ. ಇದೇ ವೇಳೆ ಪಿರ್ಯಾದುದಾರರ ಹೆಸರನ್ನು ಉಲ್ಲೇಖಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಈ ಘಟನೆದಿಂದ ಪಿರ್ಯಾದುದಾರರು ಹಾಗೂ ಅವರ ಕುಟುಂಬಕ್ಕೆ ಮಾನಸಿಕ ಆಘಾತ ಉಂಟಾಗಿದೆ ಎಂದು ತಿಳಿದುಬಂದಿದೆ. ಘಟನೆ ಏಪ್ರಿಲ್ 11 ರಂದು ಸಂಜೆ ಸಂಭವಿಸಿದ್ದು, ಏಪ್ರಿಲ್ 15 ರಂದು ಮಧ್ಯರಾತ್ರಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


